ಮಣ್ಣಿನೊಂದಿಗೆ ಬೆಸೆಯುವ ‘ಮಣ್ಣಪಾಪು ಮನೆ’
ಮತ್ತೆ ತಾಯ್ನೆಲದಲ್ಲಿ ಬದುಕಬೇಕೆಂಬ ನನ್ನ, ನನ್ನ ಪತ್ನಿಯ ಒಂದು ಸರಳ ಆಶಯವು ನಮಗೆ ಬಹಳಮಂದಿ ಸಮಾನ ಮನಸ್ಕ ಸ್ನೇಹಿತರನ್ನು ಗಳಿಸಿಕೊಟ್ಟಿದೆ. ಚಿಕ್ಕಪ್ಪ ಶೆಟ್ಟಿ-ಮಮತಾ ದಂಪತಿ ಅಂಥದ್ದರಲ್ಲೊಂದು. ಪೇಟೆಯ ಬದುಕನ್ನು ಧೈರ್ಯವಾಗಿ ಧಿಕ್ಕರಿಸಿ ಕಾರ್ಕಳದಲ್ಲಿ ನೆಲೆಸಿ ಹಿಮ್ಮುಖ ಚಲನೆಯ ದೃಡಹೆಜ್ಜೆಗಳನ್ನಿಡುತ್ತಿರುವ ಈ ದಂಪತಿ ಇತ್ತೀಚೆಗೊಂದು ಚಿಕ್ಕದಾದ, ಆದರೆ ಸದಾ ನೆನಪಿನಲ್ಲುಳಿಯುವ ಸದವಕಾಶವನ್ನು ಮಾಡಿಕೊಟ್ಟರು.
‘ಮಾಳ’ ಎಂಬ ಗ್ರಾಮ(?) ಕಾರ್ಕಳ ಮುಗಿದು ಕುದುರೆಮುಖ ಅರಣ್ಯ ಶುರುವಾಗುವ ಗೆರೆ. ಹೆಸರಿಗೆ ತಕ್ಕಂತೆ ಅದು ಬಹುಶ: ‘ಚೆಕ್ ಪೋಸ್ಟ್’ (ಅಂದರೆ ಕಾವಲು ಕಾಯುವ ‘ಮಾಳ’) ಎಂಬರ್ಥದಿಂದ ಬಂದ ಶಬ್ದವಿರಬೇಕು. ‘ಮಾಲಿ’ (ತೋಟದ ಮಾಲಿ) ಎನ್ನುವ ಶಬ್ದಕ್ಕೂ ‘ಮಾಳ’ ಎಂಬ ಶಬ್ದಕ್ಕೂ ಸಂಬಂಧವಿರುವುದೋ ಇಲ್ಲವೋ ನನಗೆ ತಿಳಿಯದು. ಇದ್ದಂತೆ ಅನಿಸುವುದಂತೂ ಸ್ಪಷ್ಟ. ಈ ಮಾಳ ಗ್ರಾಮದಲ್ಲಿ ಚಿತ್ಪಾವನೀ ಬ್ರಾಹ್ಮಣರು ಕೆಲವು ನೂರು ವರ್ಷದಿಂದ ಬಹುಸಂಖ್ಯೆಯಲ್ಲಿ ನೆಲೆಸಿ, ಕೃಷಿಕಾರ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಇವರಲ್ಲಿ ಈಗಿನ ತಲೆಮಾರು ಈಗ ಪೇಟೆಯ ದಾರಿ ಹಿಡಿದು ‘ಮಾಳ’ದ ಭೂಮಿ ಈಗ ಕೊಳ್ಳುಗರ ಕೈಗೂಸಾಗುತ್ತಿರುವುದು ದು:ಖದಾಯಕ. ಅದರೆ ಪುರುಷೋತ್ತಮ ಅಡ್ವೆ ಎಂಬ ಕಲಾಸಕ್ತ, (ದಕ್ಷಿಣ) ಕನ್ನಡಿಗ, ಕೃಷಿಕ, ಸಜ್ಜನರೊಬ್ಬರು ‘ಮಣ್ಣಪಾಪು ಮನೆ’ ಎಂಬ ಚಿತ್ಪಾವನಿ ಭೂಮಿಯನ್ನು ಕೊಂಡು ಅದನ್ನೊಂದು ಕೃಷಿ, ಜೀವನ, ಪ್ರಕೃತಿ, ಕಷ್ಟನಷ್ಟ, ಸುಖಗಳನ್ನೆಲ್ಲ ಕಲಾಸಕ್ತಿಯಿಂದ ನೋಡುವ, ಕಲಿಯುವ ತಾಣವಾಗಿ ಮಾಡುವ ಕೊನೆಯಿರದ ಪಯಣಕ್ಕೆ ಹೊರಟಿದ್ದಾರೆ. ಈ ಮನೆಯಲ್ಲಿ ‘ಒಂದು ರಾತ್ರಿ ಉಳಿದು, ಮರುದಿನ ಕಾಡಿನೊಳಕ್ಕೆ ನಡೆಯುವುದು’ ನಮಗೆ ಶೆಟ್ಟರು ಕೊಟ್ಟ ಅವಕಾಶ.
ಮಣ್ಣಪಾಪು ಮನೆ ಹಳೆಯದಾದ ಸ್ವಲ್ಪ ಸಾಮಾನ್ಯವೇ ಅನ್ನಬಹುದಾದ ಮನೆಯಾಗಿದ್ದಿರಬಹುದು - ಪುರುಷೋತ್ತಮರ ಕೈಗೆ ಬರುವಾಗ. ಐದುವರ್ಷದಿಂದ ಅವರು ಅದನ್ನು ಹಂತಹಂತವಾಗಿ ಬದಲಾಯಿಸಿ, ಹಳೆಮನೆಯ ಪಾರಂಪರಿಕ ಕಿಟಕಿಬಾಗಿಲು, ಪೀಠೋಪಕರಣಗಳಿಂದ ಸಿಂಗರಿಸಿ ‘ಸ್ವಸ್ತಿಕ’ದ ಆಕಾರಕ್ಕೆ ಹೊಂದಿಸಿ ಕಟ್ಟಿದ್ದಾರೆ. ಎಲ್ಲೂ ಅತಿಖರ್ಚು, ಅತಿಬಳಕೆ ಮಾಡಿದಂತೆ ಕಾಣಿಸುವುದಿಲ್ಲ. ತಮ್ಮ ಕೈತುಂಬ ದುಡ್ಡುಕೊಡುವ ಶಿಲ್ಪ-ಚಿತ್ರ ಕಲೆಯ ಉದ್ಯೋಗವನ್ನು ಸ್ವಲ್ಪ ಬದಿಗಿರಿಸಿ ಹಳ್ಳಿಯಲ್ಲಿ ಕೃಷಿಕನಂತೆ ಬದುಕಿ, ಬದುಕಿನೊಂದಿಗೆ ಕಲೆಯನ್ನು ಬೆಳೆಸುವ ನಡೆ-ನುಡಿಗಳಲ್ಲಿ ಹೊಂದಾಣಿಕೆ ಸಾಧಿಸುವ ಉದ್ದೇಶ ಇಟ್ಟಂತೆ ಕಾಣುವ ಅಡ್ವೆಯವರು ಕೈಯಿಟ್ಟಲ್ಲೆಲ್ಲ ತಮ್ಮ ಈ ಮೂಲಶೃತಿಯನ್ನು ಮೀಟಿದುದು ಕಾಣಿಸುತ್ತದೆ. ಮನೆ, ಪಾಗಾರ, ತೋಟ, ಬಯಲು ವೇದಿಕೆಗಳೆಲ್ಲ ಪರ್ಫೆಕ್ಟ್ ಎನ್ನುವಷ್ಟು ಸುಂದರವಾಗಿವೆ. ಇನ್ನಷ್ಟು ಚಂದಗೊಳಿಸುವುದು ಅಸಾಧ್ಯವೇನೋ ಅನ್ನುವಷ್ಟು.
![]() |
ಅಡ್ವೆಯವರು |
ಕಲೆಯು ಬರೀ ಮಾರಾಟದ ವಸ್ತುವಾಗಬಾರದು, ಜೀವನದೊಂದಿಗೆ ಸೇರಬೇಕು, ಅದಕ್ಕಾಗಿ ತಾನು ತನ್ನ ಜೀವನಶೈಲಿಯನ್ನು ಬದಲಾಯಿಸಬೇಕು ಎಂಬ ನಿರ್ಧಾರವನ್ನು ಅವರು ಹೂಹಗುರಾಗಿ ಎತ್ತಿಕೊಂಡಂತೆನಿಸುತ್ತದೆ(ನನ್ನ ಅನಿಸಿಕೆಯಷ್ಟೆ). ತಮ್ಮ ಈ ನಿರ್ಧಾರದ ಭಾರದಿಂದ ಅವರು ಸುಸ್ತಾದಂತೆನಿಸುವುದಿಲ್ಲ. ಅದಕ್ಕಾಗಿ ವಿಪರೀತ ಓದು, ಚಿಂತನೆ ಮಾಡಿದಂತೆಯೂ ಕಾಣಿಸುವುದಿಲ್ಲ. ಈ ಸಹಜತೆಯು ನನಗೆ ಬಹಳವೇ ಇಷ್ಟವಾಯಿತು. ಏಕೆಂದರೆ ನನಗೆ ಈ ರೀತಿಯ ನಿರ್ಣಯಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟವಾಗಿತ್ತೆನಿಸುತ್ತದೆ.
ಹಾಗೆಂದು ಒಬ್ಬ ಸಾಮಾನ್ಯ ಕೃಷಿಕ ಆರ್ಥಿಕ ಮೂಲಕ್ಕಾಗಿ ಒಂದಷ್ಟು ವಾಣಿಜ್ಯಿಕ ಬೆಳೆತೆಗೆಯುವುದು ತಪ್ಪೇನಲ್ಲ ಎಂಬ ಅವರ ಸಾಂದರ್ಭಿಕವಾಗಿ ಮಾತಿಗಿಳಿಸಿದ ವಾದ ನನಗೆ ಇಷ್ಟವಾಯಿತು. ಪೇಟೆಯಲ್ಲಿ ನೆಲೆಸಿ, ಅಲ್ಲಿನ ಉದ್ಯೋಗಕ್ಕೆ ಜೋತುಬಿದ್ದು ತತ್ವಾದರ್ಶಗಳನ್ನು ಗಟ್ಟಿಯಾಗಿ ಪ್ರತಿಪಾದಿಸುವ ಪರಿಸರವಾದಕ್ಕಿಂತ ಈ ವಾಸ್ತವವಾದ ಹೆಚ್ಚು ಚೆನ್ನಾದುದು ಎಂದೆನಿಸುತ್ತದೆ. ತಮ್ಮಲ್ಲಿರುವ ಅಡಿಕೆಬೆಳೆಯನ್ನು ಅವರು ಹಂತಹಂತವಾಗಿ, ನಿಧಾನವಾಗಿ ಬದಲಾಯಿಸಿ ಒಂದು ಕಾಡುತೋಟವನ್ನಾಗಿಸ ಹೊರಟಿದ್ದಾರೆ. ಈ ನೈಧಾನ್ಯ, ತಾಳ್ಮೆ ಹಳ್ಳಿಯಲ್ಲಿ ನೆಲೆಸಹೊರಟವನಿಗೆ ಬಹುಮುಖ್ಯ. ಅದು ಅವರಿಗಿದೆ. ಅವರೊಬ್ಬ ‘ಸಹಜ’ ಅತಿಥೇಯ, ಉತ್ತಮ ಬಾಣಸಿಗ. ಅವರಿನ್ನೂ ಉಡುಪಿಯಲ್ಲಿ ನೆಲೆಸಿ ವಾರಕ್ಕೆ ಕೆಲವು ದಿನ ಇಲ್ಲಿ ಬಂದು, ಇದ್ದು ಹೋಗುತ್ತಿದ್ದಾರೆ. ಇಲ್ಲಿಯೇ ನೆಲೆ ನಿಲ್ಲುವುದು ಅವರ ಗುರಿ.
ಮಣ್ಣಪಾಪು ಮನೆ ಮತ್ತು ನಾವು ಕ್ರಮಿಸಿದ ಟ್ರೆಕ್ ನ ಸೌಂದರ್ಯವನ್ನು ಬಣ್ಣಿಸುವುದಕ್ಕೆ ನಾನು ಕುವೆಂಪು ಅವರು ವರ್ಣಿಸಿದಂತೆ ಶ್ರಮಿಸಬೇಕಾದೀತು. ನಾನೀಗ ಆ ಕೆಲಸಕ್ಕೆ ಹೋಗುವುದಿಲ್ಲ. ಮನೆಯ ಸೌಂದರ್ಯವನ್ನು ನೋಡಲು ಅವರ ಜಾಲತಾಣದ ಚಿತ್ರಗಳನ್ನು ನೋಡಿ (ಸ್ವಲ್ಪ ಹಳೆಯದೆನಿಸುತ್ತವೆ, ಈಗ ಇನ್ನೂ ಚೆನ್ನಾಗಿದೆ). ಇಷ್ಟವಾದರೆ ಅವರ ಅನುಮತಿ ಪಡೆದು ಭೇಟಿ ನೀಡಿ.
ಮಮತಾ ಅವರು ನಮ್ಮ ಊಟತಿಂಡಿಗಾಗಿ ಪಟ್ಟ ಶ್ರಮ ಮತ್ತು ಅದರ ಫಲಿತಾಂಶವಾದ ‘ರುಚಿ’ಗೆ ಖಾಲಿಪಾತ್ರೆಗಳು ಸಾಕ್ಷಿಯಾದವು. ಅಲ್ಲಿನ ಕಾಡಿನಿಂದ ಸಂಗ್ರಹಿಸಿದ ಗಿಡಗಳನ್ನು ನರ್ಸರಿ ಮಾಡಲು ನನಗೆ ಒಂದು ಪೂರ್ತಿ ದಿನ ಬೇಕಾಯಿತು. ಮಣ್ಣಪಾಪು ಮನೆಭೇಟಿಯ ಶಾಶ್ವತ ನೆನಪುಗಳಾಗಿ ಇವು ಕಜೆ ವೃಕ್ಷಾಲಯದಲ್ಲಿ ಬೆಳೆಯಲಿವೆ.
`ಚಿತ್ರಗಳನ್ನು' ಎಂದು ಬರೆದರೂ ಒಂದೇ ಚಿತ್ರ ಹಾಕಿದ್ದು ತಪ್ಪಲ್ಲವಾ? ಇದೇ ಚಿಕ್ಕಪ್ಪ ಶೆಟ್ಟರು,ಮನೋಹರ ಉಪಾಧ್ಯರು, ತಮ್ಮಣ್ಣ ಉರುಫ್ ಎ.ಪಿ.ಸುಬ್ರಹ್ಮಣ್ಯ ಬೇರೆ ಬೆರೆ ಸಂದರ್ಭಗಳಲ್ಲಿ ಮಣ್ಣಪಾಪಿನ ಕಲಾಪ, ಆಮಂತ್ರಣ ಕೊಟ್ಟರೂ ನನಗೆ ಇನ್ನೂ ಸಂತೋಷಭಾಗಿಯಾಗುವ ಅದೃಷ್ಟ ಕೂಡಿಬರಲಿಲ್ಲ. ಈಗ ನೀನು ಬೇರೆ ಹೀಗೆ ಹೊಗಳಿಟ್ಟು ನನ್ನ ಹೊಟ್ಟೆಕಿಚ್ಚನ್ನು ಹೆಚ್ಚಿಸಿದ್ದಂತೂ ಖಂಡಿತಾ ತಪ್ಪು!
ReplyDeleteI am very
ReplyDeletelet know if somebody can a build me a house like this in Kunigal. Please mail me at sahityarajan@gmail.com and or mail me at 9108445995.
ReplyDeletehttp://www.athreebook.com/2018/06/blog-post_28.html
ReplyDelete